Saturday, June 17, 2017

ಗಿರಿ-ಶಿಖರಗಳು ಬೆಳೆಯುತ್ತವೆಯೇ?

ನಮಸ್ಕಾರ,

ಬಹುದಿನಗಳ ನಂತರ ಬರೆಯುವ ಮನಸ್ಸಾಗಿದೆ!

~~ಅಂಗೈಯ ಆಕಾಶದಿಂದ ನಕ್ಷತ್ರವೊಂದು ಜಾರಿ ನೇರ ಬೆಟ್ಟದ ತುದಿಯ ಮೇಲೇ ಬಿದ್ದಿದೆ.

ಕೈಗೆಟುಕದ ನಕ್ಷತ್ರವು ಗಿರಿಯ ಮೇಲೆ ಕಾಲಿರಿಸಿದರು ಮತ್ತೆ ಮೆಲ್ಲನೆ ದೂರ ಸರಿಯುವಂತೆ ಕಂಡಿದೆ.~~

ನೇಪಾಳದ ಸಾಗರಮಾತಾ ರಾಷ್ಟ್ರೀಯ ಉದ್ಯಾನವನ - ಚಿತ್ರ ಕೃಪೆ: The World at Night

ಅರೆರೆ! ವಿಜ್ಞಾನದ ಲೇಖನ ಬರೆಯುತ್ತೀನೆಂದು ಹೇಳಿ ಇದೇನು ಕವಿತೆ ಬರೆಯಲು ಶುರುಮಾಡಿದೆನೆಂದುಕೊಂಡಿರೆ??

ಇಲ್ಲ ಮೇಲಿನ ಕವನ ಇಂದಿನ ಸ್ವಾರಸ್ಯಕರ ವಿಷಯಕ್ಕೆ ಸಂಬಂಧಿಸಿದ್ದೇ! ಸರಿ ಇನ್ನು ವಿಚಾರಕ್ಕೆ ಬರೋಣ, ಪ್ರಶ್ನೆ “ಗಿರಿ-ಶಿಖರಗಳು ಬೆಳೆಯುತ್ತವೆಯೇ?”.

ಅಲ್ಲ ಸ್ವಾಮಿ! ಕಳೆದ ವರ್ಷ ನಾನು ನೆಟ್ಟ ಸಸಿ ಕೂಡ ಎಷ್ಟೇ ಪಾಲನೆ ಪೋಷಣೆ ಮಾಡಿದರೂ ಸರಿಯಾಗಿ ಎರಡು ಅಡಿ ಬೆಳೆದಿಲ್ಲ! ಇನ್ನು ಬೆಟ್ಟ-ಗುಡ್ಡ ಬೆಳಿತಾವಾ? ಹೊಗೋಗ್ ಸ್ವಾಮಿ ನಿಮ್ಗೆ ಮಾಡಕ್ ಬೇರೆ ಕೆಲ್ಸ ಇಲ್ಲ ಅಂತ ಮಾತ್ರ ಹೇಳ್ಬೇಡಿ.
ಎಲ್ಲ ಬೆಟ್ಟ-ಗುಡ್ಡಗಳು ಬೆಳೆಯದಿದ್ದರೂ ಭೂಮಿ ಮೇಲಿನ ಕೆಲವೊಂದು ಪರ್ವತ ಶ್ರೇಣಿಗಳು ಬೆಳೆಯುತ್ತಿವೆ, ಅದಕ್ಕೆ ಜೀವಂತ ಉದಾಹರಣೆಯೇ ನಮ್ಮ ಹಿಮಾಲಯ ಪರ್ವತಗಳು. ಅದು ಹೇಗೆ ಅಂತ ತಿಳ್ಕೊಳ್ಳೋಣ ಬನ್ನಿ!

ಕೋಟ್ಯಂತರ ವರ್ಷಗಳ ಕೆಳಗೆ ಈ ಭೂಮಿಯ ಮೇಲಿನ ಖಂಡಗಳು, ನಾವು ಈಗ ಅಟ್ಲಾಸ್, ಗೂಗಲ್ ಮ್ಯಾಪ್`ನಲ್ಲಿ ಕಾಣುವಂತೆ ಇರಲಿಲ್ಲ! ಏಳು ಖಂಡಗಳಾಗಿಯೂ ಇರಲಿಲ್ಲ! ಈ ಏಳೂ ಖಂಡಗಳೂ ಒಂದೇ ಭೂರಾಶಿಯಾಗಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ! ಅಂದರೆ ಮಹಾ  ಕಡಲಿನಲ್ಲಿ ತೇಲಿಬಿಟ್ಟ ತಟ್ಟೆಯ ಹಾಗೆ (ಇವು ನೀರಿನಲ್ಲಿ ತೇಲುವ ತಟ್ಟೆಗಳಾಗಿರದೆ ಭೂಗರ್ಭದಲ್ಲಿನ ಕರಗಿದ ಲಾವಾರಸದ ನಿರಂತರ ಚಲನೆಯ ಪ್ರಭಾವದಿಂದ ಮೇಲ್ಪದರದ ತಟ್ಟೆಗಳು ಅಲೆಯುತ್ತಿರುತ್ತವೆ)! ಹೀಗೆ ಕೋಟ್ಯಂತರ ವರ್ಷಗಳಿಂದ ಖಂಡಗಳು ಬೇರ್ಪಡುತ್ತ, ಹಾಗೇ ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ ಕಾಲಕ್ರಮೇಣ ಈ ಭೂಖಂಡಗಳು ಬೇರೆ ಬೇರೆ ಭಾಗಗಳಾದವು!


ಚಿತ್ರ 1: ಭೂಮಿಯ ಮೇಲ್ಮೈ ೨೦ ಕೋಟಿ ವರ್ಷಗಳ ಹಿಂದೆ

ಚಿತ್ರ 1 ರಲ್ಲಿ ತೋರಿಸಿರುವಂತೆ ಮೊದಲು ಭಾಗವಾದದ್ದು ಲಾರೇಶಿಯಾ(Laurasia, ಈಗಿನ ಉತ್ತರ ಅಮೇರಿಕ, ಯುರೋಪ್, ಏಷ್ಯಾ ಮತ್ತು ಆರ್ಕಟಿಕ್ ಖಂಡಗಳನ್ನು ಒಳಗೊಂಡಂತಹ) ಮತ್ತು ಗೊಂಡ್ವಾನಾ(Gondwana, ಈಗಿನ ದಕ್ಷಿಣ ಅಮೇರಿಕ, ಆಫ್ರಿಕಾ, ಭಾರತ ಉಪಖಂಡ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾ)ಗಳನ್ನು ಒಳಗೊಂಡಂಥ ಎರಡು ಭಾಗಗಳಾಗಿ ಬೇರ್ಪಟ್ಟವು. 




ಚಿತ್ರ 2: ಭಾರತ ಭೂಖಂಡದ ಚಲನೆ


ಚಿತ್ರ 2 ರಲ್ಲಿ ತೋರಿಸಿರುವಂತೆಗೊಂಡ್ವಾನ ಭೂರಾಶಿಯ ಇತರೆ ತಟ್ಟೆಗಳಂತೆ ಭಾರತ ಉಪಖಂಡದ ತಟ್ಟೆಯು ಸುಮಾರು ೧೦ ಕೋಟಿ(೧೦೦ ಮಿಲಿಯ) ವರ್ಷಗಳ ಹಿಂದೆ ಬೇರ್ಪಟ್ಟು ಉತ್ತರಕ್ಕೆ ಚಲಿಸುತ್ತಾ ಭೂಮಧ್ಯ ರೇಖೆಯನ್ನು ದಾಟಿ, ಸುಮಾರು ೧ ಕೋಟಿ ವರ್ಷಗಳ ಹಿಂದೆ ಯೂರೇಷಿಯಾದ ತಟ್ಟೆಗೆ ಅಪ್ಪಳಿಸಿ, ಪೂರ್ವದ ಭೂತಾನ್ ನಿಂದ ಪಶ್ಚಿಮದ ಅಫ್ಘಾನಿಸ್ತಾನದ ವರೆಗೆ ಹರಡಿಕೊಂಡಿರುವ ಹಿಮಾಲಯ ಪರ್ವತಗಳ(ಭೂಮಿಯ ಅತ್ಯಂತ ಕಿರಿವಯಸ್ಸಿನ ಪರ್ವತಗಳ) ಹುಟ್ಟಿಗೆ ಕಾರಣವಾಯಿತು.

ಭಾರತ ಉಪಖಂಡದ ತಟ್ಟೆಯು ಈಗಲೂ ವರ್ಷಕ್ಕೆ ೫-೬ ಸೆಂಟಿಮೀಟರಿನಷ್ಟು ಉತ್ತರಕ್ಕೆ ಒತ್ತರಿಸುತ್ತಲೇ ಇರುವುದರಿಂದ ಹಿಮಾಲಯದ ಪರ್ವತಗಳು ವರ್ಷಕ್ಕೆ ಅರ್ಧ ಸೆಂಟಿಮೀಟರಿನಷ್ಟು ಎತ್ತರ ಬೆಳೆಯುತ್ತಲೇ ಇವೆ. ಮುಂದಿನ ೧ ಕೋಟಿವರ್ಷಗಳಲ್ಲಿ ಭಾರತ ಉಪಖಂಡವು ಉತ್ತರಕ್ಕೆ ೧೫೦೦ ಕಿ.ಮೀ. ಗಳಷ್ಟು ದೂರ ಚಲಿಸಬಹುದು ಎಂಬುದು ವಿಜ್ಞಾನಿಗಳ ಅಂಬೋಣ. ಅಷ್ಟರಲ್ಲಿ ಮನುಷ್ಯ ಕುಲವು ಉಳಿದಿರುತ್ತದೆಯೋ ಇಲ್ಲವೋ ಎಂಬುದು ಪ್ರಕೃತಿಯೇ ನಿರ್ಧರಿಸುತ್ತದೆ.

ನೀವು ಎವರೆಸ್ಟ್ ಅಥವಾ ಹಿಮಾಲಯದ ಇನ್ಯಾವುದೊ ಶಿಖರವನ್ನು ನೀವು ಹತ್ತಿ ಇಳಿಯುವಷ್ಟರಲ್ಲಿ ಕಣ್ಣಿಗೆ ನಿಲುಕದಷ್ಟು ಪ್ರಮಾಣದಲ್ಲಿ ಚೂರೇ-ಚೂರು ಎತ್ತರವಾಗಿರುತ್ತದೆ! ನಾನು ಇನ್ನೂ ಬೆಳೆದಿದ್ದೇನೆ ನನ್ನ ಮೆಟ್ಟಿ ನಿಲ್ಲುವೆಯಾ ಎಂದು ಪಂಥಾಹ್ವಾನ ನೀಡುತ್ತಿರುತ್ತದೆ!

ಪ್ರಕೃತಿಯ ವಿಸ್ಮಯಗಳ ನಡುವೆ ಮಾನವನು ಎಂದಿಗೂ ಕುಬ್ಜನೇ! ವಿಜ್ಞಾನದ ಇನ್ನೊಂದು ಸ್ವಾರಸ್ಯಕರ ವಿಷಯದೊಂದಿಗೆ ಮತ್ತೆ ಭೇಟಿಯಾಗೋಣ!

ಅಲ್ಲಿಯವರೆಗೆ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ತಿಳಿಸಿ.

ವಿಜ್ಞಾನದ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸುವ ಸಣ್ಣ ಪ್ರಯತ್ನ ನನ್ನದು! ಇನ್ನೂ ಸರಳವಾಗಿ ತಿಳಿಸಬೇಕಿದ್ದರೂ ತಿಳಿಸಿ, ಮುಂದಿನ ಲೇಖನಗಳಲ್ಲಿ ಪ್ರಯತ್ನಿಸುತ್ತೇನೆ.

ಮತ್ತೆ ಸಿಗೋಣ!

ನಿಮ್ಮವ

 - ನಾಗರಾಜ ಸಾಠೆ

ಚಿತ್ರ ಕೃಪೆ: ಗೂಗಲ್ ಹುಡುಕಾಟ

Wednesday, January 20, 2016

ವ್ಯಾಟ್ಗೂಡಿದರೆ ಯುನಿಟ್ಟು


ಬಹಳ ದಿನಗಳ ನಂತರ ಎಲ್ಲರಿಗೂ ಉಪಯುಕ್ತವಾಗುವಂತಹ ಲೇಖನ ಬರೆಯಬೇಕೆಂದು ಮನಸಾಯ್ತು! ಏನು ಬರೆಯೋಣವೆಂದು ಯೋಚಿಸುತ್ತಾ ಕುಳಿತಿದ್ದೆ ತಕ್ಷಣ ಕರೆಂಟು ಹೋಯ್ತು ಆಗಲೇ ಹೊಳೆದದ್ದು ವಿದ್ಯುತ್ ಬಳಕೆಯನ್ನು ಹೇಗೆ ಅಳೆಯುತ್ತಾರೆ ತಿಳಿಯೋಣ - ತಿಳಿಸೋಣವೆಂದು. ಅದರ ಕೃತಿರೂಪವು ಇದೀಗ ನಿಮ್ಮದೇ ಕಣ್ಣುಗಳ ಮೂಲಕ ನಿಮ್ಮ ತಲೆಗೆ ಹೊಕ್ಕುತ್ತಿರುವ ಈ ಲೇಖನ. ಶೀರ್ಷಿಕೆ ಏನಪ್ಪಾ ವಿಚಿತ್ರವಾಗಿದೆ ಎಂದು ಯೋಚಿಸಬೇಡಿ. ಮುಂಜಾನೆ ಸೂರ್ಯನಿಗೆ ಕರಗುವ ಮಂಜಿನಂತೆ ತಿಳಿಯಾಗುತ್ತದೆ, ಓದುತ್ತಾ ಹೋಗಿ. :)

ನಿತ್ಯ ಜೀವನದಲ್ಲಿ ಈ ವಿದ್ಯುತ್ ಅಥವಾ ಜನಜನಿತವಾಗಿರುವ ಕರೆಂಟೆಂಬುದು ಬೆಳಿಗ್ಗೆ ಎದ್ದೇಳಲು ಉಪಯೋಗಿಸುವ ಅಲಾರಂ, ಕೈಲಾಡುವ ಮೊಬೈಲ್ನಿಂದ ಹಿಡಿದು ರಾತ್ರಿ ಮಲಗುವಾಗ ಹಿತ ತರುವ ಫ್ಯಾನ್(ವಿದ್ಯುತ್ ಬೀಸಣಿಗೆ)ಗಳೂ ಸಹ ಕೆಲಸಮಾಡಲು ಬೇಕಾದ ಅಗೋಚರ ಶಕ್ತಿಯಾಗಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅಷ್ಟೇ ಏಕೆ ಹಸಿದಾಗ ತಟ್ಟೆಗೆ ಬಂದು ಬೀಳುವ ರುಚಿಕರ ತಿಂಡಿ-ಊಟಗಳನ್ನು ಮಾಡಲು ಬೇಕಾಗುವ ಧಾನ್ಯಗಳು ತರಕಾರಿಗಳನ್ನು ಬೆಳೆಯಲು ನೀರು ಹಾಯಿಸಬೇಡವೆ? ಅದಕ್ಕೂ ನಮ್ಮ ಆಪ್ತಮಿತ್ರ ಕರೆಂಟಿನ ಉಪಸ್ಥಿತಿ ಇರಲೇಬೇಕು!

ಪ್ರತಿ ತಿಂಗಳೂ ಬಂದ ಕರೆಂಟ್ ಬಿಲ್ಲಿನ ಮೊತ್ತನೋಡಿ ತಮ್ಮ ಮನೆಯವರಿಗೋ ಸರ್ಕಾರಕ್ಕೋಹಿಡಿಶಾಪ ಹಾಕುತ್ತಾ ಹಣಪಾವತಿ ಕೌಂಟರ್ ಗೆ ಹೋಗಿ ಅಥವಾ ಅಂತರ್ಜಾಲವೆಂಬ ಸೋಮಾರಿ ಕಟ್ಟೆಯಲ್ಲಿಯೇ ಕುಳಿತು, ಇನ್ನಷ್ಟು ಮುಂದುವರೆದು ‘ಆ್ಯಪ್’ ಎಂಬ ಅಂಗೈಲಿರುವ ಮಂಗನ(ನಾನು ಯಾವುದೇ ರಾಜಕೀಯ ಪಕ್ಷವನ್ನು ಗುರಿಯಾಗಿಸಿ ಮಾತನಾಡುತ್ತಿಲ್ಲ!) ಸಹಾಯದಿಂದ ಹಣಕಟ್ಟಿ ಕೈತೊಳೆದುಕೊಂಡುಬಿಡುತ್ತೇವೆ. ಯಾವತ್ತೂ ನಾವು ತಿಂಗಳ ವಿದ್ಯುತ್ ಬಳಕೆಯೆಷ್ಟು? ವಿದ್ಯುತ್ ಪೂರೈಕೆದಾರರು ನಮ್ಮ ವಿದ್ಯುತ್ ಬಳಕೆಗೆ ಈ ಮೊತ್ತವನ್ನು ಹೇಗೆ ಲೆಕ್ಕಹಾಕಿದರೆಂದು ಯೋಚಿಸುವ ಗೋಜಿಗೇ ಹೋಗುವುದಿಲ್ಲ.
ಇಂದು ಬಿಡುವುಮಾಡಿಕೊಂಡು ಓದಿಬಿಡಿ!

ಮತ್ತೆ ವಿದ್ಯುತ್ ಬಿಲ್ಲಿಗೇ ಬರೋಣ! ಈ ವಿದ್ಯುತ್ ಬಿಲ್ಲನ್ನು ಕೂಲಂಕುಷವಾಗಿ ನೋಡಿದಾಗ 
ಉದಾಹರಣೆಗೆ:
“ಹಾಲಿ ಮಾಪನ(Present reading)” 3560
“ಹಿಂದಿನ ಮಾಪನ(Previous reading)” 3520
“ಬಳಸಿದ ಯುನಿಟ್’ಗಳು(Units consumed)” 40
ಎಂದಿರುತ್ತದೆ. 

ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತಿ ಯುನಿಟ್’ಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಿರುತ್ತಾರೆ. ಅದರ ಆಧಾರದ ಮೇಲೆ ತಿಂಗಳ ವಿದ್ಯುತ್ ಬಳಕೆಯ ಬಿಲ್ಲನ್ನು ಹೂಡಿ ನಮ್ಮ ಮೇಲೆ ಬಾಣ ಬಿಡುತ್ತಾರೆ!!

ಹಾಗಾದರೆ ‘ಯುನಿಟ್’ ಬಳಕೆ ಕಡಿಮೆ ಮಾಡಿದಷ್ಟು ನಮ್ಮ ಬಿಲ್ಲಿನ ಮೊತ್ತ ಕಡಿಮೆಯಾಗುತ್ತದೆಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ವಿದ್ಯುತ್ ಬಳಕೆ ಕಡಿಮೆಮಾಡಲು ಎಲ್ಲ ವಿದ್ಯುತ್ ಉಪಕರಣಗಳನ್ನು ನಂದಿಸಿ ಕುಳಿತರಾದೀತೆ? ನಂದಾದೀಪ ಬೆಳಗುತ್ತಿದ್ದರಲ್ಲವೇ ಬದುಕು ಸಾಗುವುದು.

ಇದಕ್ಕೆ ಉಪಾಯವೇನು ಎಂದು ಯೋಚಿಸುತ್ತಾ ಕುಳಿತಿರೇ? ಚಿಂತೆಬಿಡಿ! ಅದಕ್ಕೆ ಸರ್ವಶ್ರೇಷ್ಠವಾದ ಒಂದು ಉಪಾಯವಿದೆ, ಅದೇ ಕಡಿಮೆ ವಿದ್ಯುತ್ ಖರ್ಚುಮಾಡಿ ಹೆಚ್ಚು ಬೆಳಕು ತರುವ ದೀಪಗಳನ್ನು ಬಳಸುವುದು ಅಥವಾ ಕಡಿಮೆ ವಿದ್ಯುತ್ ಬಳಸಿ ಅಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸುವ ವಿದ್ಯುತ್ ಉಪಕರಣಗಳನ್ನು ಬಳಸುವುದು(ಟಿ.ವಿ., ಫ್ರಿಡ್ಜು, ವಾಶಿಂಗ್ ಮಷೀನು, ಇತ್ಯಾದಿ).

ಈಗ ಸಹಜವಾಗಿ ನಮ್ಮಲ್ಲಿ ಮೂಡುವ ಪ್ರಶ್ನೆ “ವಿದ್ಯುತ್ ಬಳಕೆಯನ್ನು ಹೇಗೆ ಅಳೆಯುತ್ತಾರೆ?” ಎಂದು:
ಇದಕ್ಕೆ ಉತ್ತರ ಹುಡುಕಲು ಪ್ರಯತ್ನಿಸೋಣ:
ಉದ್ದವನ್ನು ಅಂಗುಲ(Inch), ಅಡಿ(Foot), ಮೀಟರ್’ಗಳಲ್ಲಿಯೂ
ತೂಕವನ್ನು ಗ್ರಾಂ, Ounce ಗಳಲ್ಲಿಯೂ
ಉಷ್ಣತೆಯನ್ನು Celsius, fahrenheit ಗಳಲ್ಲಿಯೂ ಅಳೆಯುವುದು ನಮಗೆ ತಿಳಿದ ವಿಚಾರ.

ಹಾಗೆಯೆ ವಿದ್ಯುತ್ ಬಳಕೆಯನ್ನು ವ್ಯಾಟ್-ಅವರ್ kWh ಗಳಲ್ಲಿ(ವಿದ್ಯುತ್ ಪ್ರವಹಿಸುವಾಗ ೧ ಗಂಟೆಯಲ್ಲಿ ಎಷ್ಟು ಶಕ್ತಿಯನ್ನು ಹೊರಹೊಮ್ಮಿಸುತ್ತದೆ ಎಂದು) ಅಳೆಯುತ್ತಾರೆ,
 ೧ ಕಿ.ವ್ಯಾ.ಅ. (ಕಿಲೊ ವ್ಯಾಟ್-ಅವರ್ kWh ) =  ೧ ಯುನಿಟ್.  
ಅಂದರೆ ೧೦೦೦ ವ್ಯಾಟ್-ಅವರ್’ಗಳು ೧  ಯುನಿಟ್’ಗೆ ಸಮ. ಇನ್ನೂ ಸುಲಭವಾಗಿ ಹೇಳಬೇಕಾದರೆ  ೧ ಕಿ.ವ್ಯಾ. ವಿದ್ಯುತ್ ಖರ್ಚಾದರೆ ವಿದ್ಯುತ್ ಮಾಪಕದಲ್ಲಿ ಒಂದು ಅಂಕೆ ಹೆಚ್ಚಾಗುತ್ತದೆ.  ೧ ವ್ಯಾಟ್ ಅಂದರೆ ಎಷ್ಟು ಎಂಬುದನ್ನು ಶಾಸ್ತ್ರೀಯವಾಗಿ ತಿಳಿಯುವ ಸಲುವಾಗಿ ತಲೆಕೆಡಿಸಿಕೊಳ್ಳುವುದು ಬೇಡ. ಅದರ ಬದಲು ದಿನನಿತ್ಯದ ಬಳಕೆಯಲ್ಲಿರುವ ಬಲ್ಬುಗಳನ್ನೇ ಉದಾಹರಣೆಗೆ ತೆಗೆದುಕೊಳ್ಳೋಣ:

೪೦ ವ್ಯಾಟಿನ ವಿದ್ಯುತ್ ಬಲ್ಬೊಂದು ಒಂದು ಗಂಟೆ ಉರಿದಾಗ(240 ವೋಲ್ಟೇಜ್ ಇದ್ದಾಗ) ೪೦ ವ್ಯಾಟ್ ನಷ್ಟು ವಿದ್ಯುತ್ ಶಕ್ತಿಯನ್ನು ಖರ್ಚುಮಾಡುತ್ತದೆ. ಅಂದರೆ ೪೦ ವ್ಯಾಟಿನ ಬಲ್ಬನ್ನು ಸತತ ೨೫ ಗಂಟೆಗಳ ಕಾಲ ಉರಿಸಿದ್ದಲ್ಲಿ ೧ ಕಿ.ವ್ಯಾ. ಅಂದರೆ ಒಂದು ಯುನಿಟ್’ನಷ್ಟು ವಿದ್ಯುತ್ ಬಳಕೆಯಾಗಿರುತ್ತದೆ. ಹೀಗೆ ಪ್ರತಿ ವಿದ್ಯುತ್ ಉಪಕರಣವೂ ತನ್ನದೇ ಆದ ವಿದ್ಯುತ್ ವ್ಯಯಿಸುವ ಶಕ್ತಿಯನ್ನು(ಹರಹನ್ನು) ಹೊಂದಿರುತ್ತದೆ.

ವಿದ್ಯುತ್ ಉಪಕರಣಗಳ ಅಂದಾಜು ವಾರ್ಷಿಕ ವಿದ್ಯುತ್ ಬಳಕೆಯನ್ನು ಕೆಳಗಿನ ಪಟ್ಟಿಯಲ್ಲಿ ನೋಡೋಣ: 

ವಿದ್ಯುತ್ ಉಪಕರಣ
ಹರಹು(capacity) ವ್ಯಾಟ್’ಗಳಲ್ಲಿ
ಅಂದಾಜು ಬಳಕೆ ದಿನಗಳಲ್ಲಿ
ಒಟ್ಟು ವಾರ್ಷಿಕ ಬಳಕೆ ಯುನಿಟ್’ಗಳು
(ಕಿಲೊ ವ್ಯಾಟ್-ಅವರ್ kWh )
ಫ್ರಿಡ್ಜು (A+)
೧೫೦ ರಿಂದ ೨೦೦
೩೬೫ ದಿನ - ನಿರಂತರ
೧೦೦೦
ವಾಶಿಂಗ್ ಮಶಿನ್
೨೫೦೦ ರಿಂದ ೩೦೦೦
೪೮ ವಾರ x ೪ ಬಾರಿ ಪ್ರತಿ ವಾರಕ್ಕೆ (೧ kWh ಪ್ರತಿ ಬಾರಿ)
೧೯೨
LED ಟಿ.ವಿ.
೨೦ ರಿಂದ ೬೦
೩೬೫ ದಿನ(ದಿನಕ್ಕೆ ೪ ಗಂಟೆ)
೫೮
ಬಲ್ಬ್ x ೪
೪೦
೩೬೫ ದಿನ(ದಿನಕ್ಕೆ ೪ ಗಂಟೆ)
೨೩೩
LED ಬಲ್ಬ್ x ೪
೩೬೫ ದಿನ(ದಿನಕ್ಕೆ ೪ ಗಂಟೆ)
೪೧
ಮೊ. ಚಾರ್ಜರ್
೩೬೫ ದಿನ(ದಿನಕ್ಕೆ ೧ ಗಂಟೆ)
೧.೮
ಟಿ. ವಿ(ಹಳೆಯ ಮಾದರಿ)
೧೦೦ ರಿಂದ ೧೨೦
೩೬೫ ದಿನ(ದಿನಕ್ಕೆ ೪ ಗಂಟೆ)
೧೪೬


ಮೇಲಿನ ಪಟ್ಟಿಯಿಂದ ನಮಗೆ ತಿಳಿಯುವ ವಿಷಯ, ಹೆಚ್ಚು ವಿದ್ಯುತ್ ಉಳಿಸುವ (ಕಡಿಮೆ ವಿದ್ಯುತ್ ಬಳಸುವ) ಉಪಕರಣಗಳನ್ನು ಕೊಂಡಲ್ಲಿ ಕಡಿಮೆ ವಿದ್ಯುತ್ ಯುನಿಟ್’ಗಳು ಬಳಕೆಯಾಗಿ ಬಿಲ್ಲಿನ ಮೊತ್ತವೂ ಕಡಿಮೆಯಾಗುವುದೆಂದು. ಉದಾ: ಸಾಮಾನ್ಯ ಬಲ್ಬ್’ಗಳ ಬದಲು LED ಬಲ್ಬ್ ಗಳನ್ನು ಉಪಯೋಗಿಸುವುದರಿಂದ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು.

ಇನ್ನು ಮುಂದೆ ಯಾವುದೇ ವಿದ್ಯುತ್ ಉಪಕರಣವನ್ನು ಕೊಳ್ಳುವಾಗ, ಎಷ್ಟು ವಿದ್ಯುತ್ ಉಳಿಸುತ್ತದೆ ಎನ್ನುವ ಕಡೆಯೂ ಗಮನವಿರಲಿ. ಹೆಚ್ಚು ವಿದ್ಯುತ್ ಬಳಸುವ ಆದರೆ ಕಡಿಮೆ ಬೆಲೆಗೆ ಲಭ್ಯವಿರುವ ಉತ್ಪನ್ನಗಳಿಗೆ ಮಾರುಹೋಗಬೇಡಿ. 
ಈಗಲೇ ನಿಮ್ಮ ವಿದ್ಯುತ್ ಬಿಲ್ಲನ್ನು ಕೈಗೆತ್ತಿಕೊಳ್ಳಿ ಮತ್ತು ವಿದ್ಯುತ್ ಬಳಕೆ ಹಾಗು ಉಳಿಕೆಯ ಬಗ್ಗೆ ಮಾರ್ಗೋಪಾಯಗಳನ್ನು ಯೋಚಿಸಿ - ಉಳಿಸಿ - ನಮಗೂ ತಿಳಿಸಿ.

“ಹನಿಗೂಡಿದರೆ ಹಳ್ಳ” ಎಂಬಂತೆ “ವ್ಯಾಟ್ಗೂಡಿದರೆ ಯುನಿಟ್ಟು” ಎಂಬುದನ್ನು ಮರೆಯದಿರೋಣ. ವಿದ್ಯುತ್ ಉಳಿಸೋಣ - ಪರಿಸರ ಉಳಿಸೋಣ. ಹಾಗೇ ನಮ್ಮ ಇಂಧನ ಸಚಿವರಿಗೂ ವಿದ್ಯುತ್ ಖರೀದಿಸುವ ತಲೆಬಿಸಿ ಕಡಿಮೆ ಮಾಡೋಣ. ;)


ಅಂಗೈಯಲ್ಲಿನ ಆಕಾಶಕ್ಕೆ ಸೇರ್ಪಡೆಯಾದ ಈ ಹೊಸ ಮಿಂಚನ್ನು ಸ್ವಾಗತಿಸುತ್ತೇರೆಂದು ಭಾವಿಸಿದ್ದೇನೆ.

“ತಮಸೋಮಾ ಜ್ಯೋತಿರ್ಗಮಯ”
(ಕತ್ತಲಿನಿಂದ ಬೆಳಕಿನೆಡೆಗೆ)

ನಿಮ್ಮವ,
ನಾಗರಾಜ ಸಾಠೆ
ಹಾರಗದ್ದೆ

Wednesday, June 26, 2013

ನಿಲ್ಲದ ರೈಲುಗಳು, ಓಡುವ ನಿಲ್ದಾಣಗಳು!

ಆಕಾಶದ ಮೂರನೆ ತಾರೆ ರೈಲು ಗಾಡಿಯ ಭವಿಷ್ಯದ ಕತೆ ಹೇಳುತ್ತಿದೆ, ಕೇಳಬನ್ನಿ.

ಹಿಸಿಕೊಳ್ಳಿ: ಮುಂದೊಂದು ದಿನ ನೀವು ದಿಲ್ಲಿಯಿಂದಲೋ ಅಥವಾ ಮುಂಬೈನಿಂದಲೋ ರೈಲಿನಲ್ಲಿ ಹೊರಟಿದ್ದೀರಿ. ಗಾಡಿ ಗಂಟೆಗೆ ನೂರೋ ನೂರೈವತ್ತೋ ಕಿ.ಮೀ. ವೇಗದಲ್ಲಿ ಚಲಿಸುತ್ತಿದೆ. ಆದರೆ ಪ್ರತಿಯೊಂದು ಹಳ್ಳಿ ಪಟ್ಟಣ ಬಂದಾಗ ರೈಲು ನಿಲ್ಲುತ್ತಲೇ ಇಲ್ಲ, ಹಾಳಾಗಿ ಹೋಗ್ಲಿ ನಮ್ಮ ಊರು ಬಂದಾಗ ನಿಂತರೆ ಸಾಕು ಎಂದು ಕೊಂಡು ಸುಮ್ಮನಾಗುತ್ತೀರಿ, ನಿಮ್ಮ ಊರೂ ಬಂತು ರೈಲಿನ ಬ್ರೇಕ್ ಶಬ್ದವೂ ಕೇಳುತ್ತಿಲ್ಲ - ವೇಗವೂ ಕಡಿಮೆಯಾಗುತ್ತಿಲ್ಲ. ಇದೇನು?! ಯಾವ ರಾಜ್ಯದ ಸಂಸದರ ಲಾಬಿಯಿಂದ ನಮ್ಮ ಊರನ್ನು ಹಾದು ಹೋಗೋ ರೈಲು ನಮ್ಮೂರಿನಲ್ಲಿಯೇ ನಿಲ್ಲುವುದಿಲ್ಲ!. ಬಹಳ ಅನ್ಯಾಯ ಎಂದು ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ಫೋನಾಯಿಸಲು ಕಿಸೆಗೆ ಕೈ ಹಾಕುತ್ತೀರಿ. ಅಷ್ಟರಲ್ಲಿಯೇ ಅಶರೀರ ವಾಣಿಯೊಂದು ತೇಲಿಬಂದು ನಿಮ್ಮ ಕಿವಿ ಮುಟ್ಟುತ್ತದೆ. "ಮುಂಬೈನಿಂದ ಹೊರಟ ಗಾಡಿಯು 'ನಿಮ್ಮ ಊರು' ತಲುಪುತ್ತಿದೆ. ಇಳಿಯಲು ಬಯಸುವ ಪ್ರಯಾಣಿಕರು ದಯಮಾಡಿ ನಿಮ್ಮೂರಿನಲ್ಲಿಯೇ ಕಳಚಲು ಸಿದ್ಧವಾಗಿರುವ ಬೋಗಿಯನ್ನು ಒಂದು ನಿಮಿಷದಲ್ಲಿ ಪ್ರವೇಷಿಸಲು ವಿನಂತಿಸುತ್ತೇವೆ. ಧನ್ಯವಾದಗಳು." ಓಹೋ!ಹೀಗೋ ವಿಷಯ ಎಂದುಕೊಂಡು ನಿಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಕಳಚಲಿರುವ ಬೋಗಿಗೆ ಬಂದು ನಿಲ್ಲುತ್ತೀರಿ. ಬೋಗಿಯ ಬಾಗಿಲು ತಂತಾನೆ ಮುಚ್ಚಿಕೊಳ್ಳುತ್ತದೆ. ಬೋಗಿಯ ವೇಗ ತಗ್ಗುತ್ತಾ ಮತ್ತೆ ನಯವಾಗಿ ಬಾಗಿಲುಗಳು ತೆರೆದುಕೊಳ್ಳಲು ನಿಮ್ಮೂರಿನ ರೈಲು ನಿಲ್ದಾಣದ ದರುಶನವಾಗಿ ನಿಟ್ಟುಸಿರು ಬಿಡುತ್ತೀರಿ. 

ಇದೇನಪ್ಪಾ ವಿಜ್ಞಾನದ ಬರಹ ಅಂತ ಹೇಳಿ ಅಜ್ಜಿ ಕತೆ ಹೇಳ್ತಿದ್ದೇನೆ ಅಂದು ಕೊಂಡಿರಾ? ಖಂಡಿತ ಇಲ್ಲ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಒಂದು ನಿಲ್ದಾಣದಿಂದ ಹೊರಟ ರೈಲನ್ನು ಮಧ್ಯ ಬರುವ ಯಾವುದೇ ನಿಲ್ದಾಣಗಳಲ್ಲಿ ನಿಲ್ಲಿಸದೇ ನೇರ ಕೊನೆಯ ನಿಲ್ದಾಣದಲ್ಲಿ ನಿಲ್ಲಿಸಲು ಭಾರಿ ಪ್ರಯೋಗಗಳು ನಡೆಯುತ್ತಿವೆ. ಹೇಗೆ ಅಂತೀರಾ ಈ ದೃಶ್ಯ ನೋಡಿ.



ದೃಶ್ಯದಲ್ಲಿ ಕಂಡದ್ದನ್ನು ಪದಗಳಲ್ಲಿ ಇಳಿಸೋಣ,  ಅತ್ಯಂತ ವೇಗದಲ್ಲಿ ಚಲಿಸುತ್ತಿರುವ ರೈಲೊಂದಕ್ಕೆ ಇನ್ನೊಂದು ಪುಟಾಣಿ ರೈಲು ಬಂದು ಕೂಡಿಕೊಳ್ಳುತ್ತದೆ. ತಕ್ಷಣ ಬಾಗಿಲುಗಳು ತೆರೆದುಕೊಂಡು ಇಳಿಯುವ ಹಾಗು ಹತ್ತುವ ಪ್ರಯಾಣಿಕರು ಅದಲು ಬದಲಾಗುತ್ತಾರೆ. ಹಾಗೆಯೇ ಬಾಗಿಲುಗಳನ್ನು ಮುಚ್ಚಿಕೊಂಡ ಮುಖ್ಯ ರೈಲು, ಪುಟಾಣಿ ರೈಲಿನ ಸಂಬಂಧ ಕಡಿದುಕೊಂಡು ಮುಂದೆ ಸಾಗುತ್ತದೆ. ಪುಟಾಣಿ ರೈಲು ತನ್ನ ವೇಗವನ್ನು ಕುಗ್ಗಿಸುತ್ತಾ ನಿಲ್ಲುತ್ತದೆ ಅಥವಾ ಇನ್ನೊಂದು ನಿಲ್ದಾಣವನ್ನು ತಲುಪುತ್ತದೆ.

ಈ ಕಲ್ಪನೆಯ ಮೂಲ ಉದ್ದೇಶ ರೈಲು ಪ್ರಯಾಣದ ಸಮಯದಲ್ಲಿ, ನಿಲ್ದಾಣಗಳಲ್ಲಿ ರೈಲು ತನ್ನ ವೇಗವನ್ನು ಕಡಿಮೆ ಮಾಡುತ್ತಾ ನಿಲ್ಲಿಸಲು, ರೈಲು ಗಾಡಿಯು ನಿಗದಿತ ಸಮಯ ನಿಲ್ದಾಣದಲ್ಲಿ ನಿಂತು, ಹೊರಟ ಬಳಿಕ ಮತ್ತೆ ತನ್ನ ವೇಗವನ್ನು ಪಡೆಯಲು ತಗಲುವ ಸಮಯ ಹಾಗು ಇಂಧನ ವೆಚ್ಚವನ್ನು ಗಣನೀಯವಾಗಿ ಇಳಿಸುವುದೇ ಆಗಿದೆ.

ಉದಾಹರಣೆಗೆ: 'ಅ' ಎಂಬ ನಗರದಿಂದ 'ಬ' ಎಂಬ ನಗರದಿಂದ ೫೦೦ ಕಿ.ಮೀ. ದೂರವಿದೆ ಎಂದುಕೊಳ್ಳಿ, ಹಾಗೆಯೇ ಈ ನಗರಗಳ ಮಧ್ಯೆ ೧೦ ನಿಲ್ದಾಣಗಳಿದ್ದಲ್ಲಿ, ಗಂಟೆಗೆ ಸರಾಸರಿ ೧೦೦ ಕಿ.ಮೀ. ವೇಗದಲ್ಲಿ ಹೊರಟ ರೈಲು ಪ್ರತಿ ನಿಲ್ದಾಣದಲ್ಲಿ ೫ ನಿಮಿಷ ನಿಂತು ಹೊರಟರೆ ೫೦ ನಿಮಿಷ ರೈಲು ನಿಂತಲ್ಲಿಯೇ ಸಮಯ ವ್ಯರ್ಥವಾಯಿತಲ್ಲವೇ? ಹಾಗೆಯೇ ಪ್ರತಿ ನಿಲ್ದಾಣದಲ್ಲಿ ರೈಲಿನ ವೇಗ ಇಳಿಸಲು ಹಾಗು ಹೆಚ್ಚಿಸಲು ೧ ನಿಮಿಷ(ಇದು ಕೇವಲ ಲೆಕ್ಕ ಸುಲಭವಾಗಿಸಲು!) ಕಾಲಾವಕಾಶ ತೆಗೆದುಕೊಂಡಲ್ಲಿ ಒಟ್ಟು ೧೦ ನಿಮಿಷ ಇದಕ್ಕೇ ಬೇಕಾಗುತ್ತದೆ. ಹೀಗೆ ಗಂಟೆಗೆ ನೂರು ಕಿ.ಮೀ. ವೇಗದಲ್ಲಿ ಹೊರಟ ರೈಲು 'ಬ' ನಗರ ತಲುಪಲು ೫ ಗಂಟೆ ಪ್ರಯಾಣಿಸಲು ಹಾಗು ಒಂದು ಗಂಟೆ(ಬೇರೆ ಬೇರೆ ನಿಲ್ದಾಣಗಳಲ್ಲಿ) ನಿಲ್ಲಲು, ಒಟ್ಟು ೬ ಗಂಟೆಗಳು ಬೇಕಾಗುತ್ತದೆ. ಇದೇ ರೈಲು ನಿಲ್ಲದೇ ಓಡಿದಾಗ 'ಬ' ನಗರ ತಲುಪಲು ೫ ಗಂಟೆಯೇ ಸಾಕಾಗುವುದಲ್ಲವೇ?
ಈ ೫ ನಿಲ್ದಾಣಗಳಲ್ಲಿ ಜನರನ್ನು ಇಳಿಸಲು ಹಾಗು ಹತ್ತಿಸಲು ರೈಲಿಗೆ ಸೇರಿಕೊಳ್ಳುವ ಒಂದು ಬೋಗಿ (ಇಂಜಿನ್ ಸಹಿತ) ಬೇಕಾಗುತ್ತದೆ.

ಹೇಗಿದೆ ಉಪಾಯ!


ನಿಲ್ಲದ ರೈಲುಗಳಲ್ಲಿ ಪ್ರಯಾಣಿಸಲು ಸಿದ್ಧರಿದ್ದೀರಲ್ಲವೇ.
ಮತ್ತೊಂದು ಸ್ವಾರಸ್ಯಕರ ವಿಷಯದೊಂದಿಗೆ ಭೇಟಿಯಾಗೋಣ.
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು 'ಕಮೆಂಟ್ಸ್' ಮೂಲಕ ಹಂಚಿಕೊಳ್ಳಿ.
ಇಂತಿ ನಿಮ್ಮವ,
ನಾಗರಾಜ ಸಾಠೆ

ಮೂಲ ಸಾಹಿತ್ಯ, ದೃಶ್ಯ ಕೃಪೆ: ಅಂತರ್ಜಾಲ

Saturday, March 23, 2013

ನಾವು ಏಕೆ ಆಕಳಿಸುತ್ತೇವೆ?

ಅಂಗೈಯಲ್ಲಿ ಆಕಾಶದ ಎರಡನೇ ನಕ್ಷತ್ರವಿಂದು ಬಾಯ್ದೆರೆದು ಆಕಳಿಸುತ್ತಿದೆ ನೋಡಬನ್ನಿ. 

ಹೀಗೆ ಮಾಡಿ ನೋಡಿ: 

ಮುಂದಿನ ಬಾರಿ ನೀವು ಒಂದು ಗುಂಪಿನ ನಡುವೆ ಇದ್ದಾಗ ಮನಸೋ-ಇಚ್ಛೆ ಆಕಳಿಸಿ ಬಿಡಿ. ನಂತರ ನಿಮ್ಮನ್ನು ಎಷ್ಟು ಜನ ಅನುಸರಿಸುತ್ತಾರೆಂದು ನೋಡಿ!?
ಮತ್ತೆ ನೀವು ಈ ಬರಹವನ್ನು ಓದಿ ಮುಗಿಸುವಷ್ಟರಲ್ಲಿ ಒಮ್ಮೆಯಾದರೂ ಆಕಳಿಸಿದ್ದಲ್ಲಿ ನನ್ನನ್ನು ನಿಂದಿಸಬೇಡಿ.

ಆಕಳಿಕೆ ಏಕೆ ಬರುತ್ತದೆ?

ಈ ಪ್ರಶ್ನೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಕೇಳಿದ್ದಲ್ಲಿ ಉತ್ತರ ಸಲೀಸಾಗಿ ಸಿಗುತ್ತದೆ: "ಆ ಮಾಸ್ತರು ತುಂಬಾ bore ಹೊಡೆಸುತ್ತಾರೆಂದು".  ಹಾಗಾದರೆ ಇದೊಂದೇ ಕಾರಣವೆ ಆಕಳಿಸಲು? ಇಲ್ಲ. 
ಸಾಮಾನ್ಯವಾಗಿ ನಮಗೆ ನಿದ್ದೆ ಬರುವಾಗ, ನಿದ್ದೆಯಿಂದ ಎದ್ದಾಗ, ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಇಲ್ಲದಿದ್ದಾಗ ಅಥವಾ ಯಾರಾದರು ಆಕಳಿಸುವುದನ್ನು ನೋಡಿದಾಗ ಆಕಳಿಸಬೇಕೆನಿಸುತ್ತದೆ(ಕೆಲವೊಮ್ಮೆ ಆಕಳಿಸುತ್ತಿರುವ ಭಾವಚಿತ್ರವನ್ನು ಅಥವಾ ದೃಶ್ಯವನ್ನು ನೋಡಿದಾಗಲೂ ಆಕಳಿಕೆ ಬರುವುದುಂಟು!). ಆಕಳಿಕೆ ಅಂಟು ಜಾಡ್ಯ ಹಾಗು ನಮ್ಮ ಹತೋಟಿಯಲ್ಲಿಲ್ಲದ್ದು ಎಂಬುದು ಎಲ್ಲರೂ ಒಪ್ಪುವಂಥ ಮಾತು. 
ಗರ್ಭದಲ್ಲಿರುವ ೧೧ ವಾರಗಳ ಭ್ರೂಣವೂ ಆಕಳಿಸುತ್ತದೆ ಎಂದು ಇತ್ತೀಚಿಗೆ ವಿಜ್ಞಾನಿಗಳು ವರದಿ ಮಾಡಿದ್ದಾರಂತೆ!.

ಆಕಳಿಕೆ ಬಗೆಗಿನ ಸಿದ್ಧಾಂತಗಳು:

 ಆಕಳಿಕೆ ಎಂಬುದು ಸರ್ವವ್ಯಾಪಿ ಹಾಗೂ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವೇ ಆಗಿದ್ದರೂ, ಇದರ ಮೂಲ ಕಾರಣ ವಿಜ್ಞಾನಿಗಳಿಗೆ ಇನ್ನೂ ಎಟುಕದ ದ್ರಾಕ್ಷಿಯಾಗಿರುವುದು ಸೋಜಿಗವೇ ಸರಿ. ಇಷ್ಟಾಗಿಯೂ ಪ್ರಚಲಿತದಲ್ಲಿ ಆಕಳಿಕೆಯ ಕಾರಣದ ಬಗೆಗೆ ನಾನಾ ಸಿದ್ಧಾಂತಗಳಿವೆ. ಅವುಗಳಲ್ಲಿ ಮುಖ್ಯವಾದವು:
೧. ಶಾರೀರಿಕ ಸಿದ್ಧಾಂತ: 
ನಮ್ಮ ಶ್ವಾಸಕೋಶದಲ್ಲಿ(ಉಸಿರು ಪೆಟ್ಟಿಗೆಯಲ್ಲಿ!) ಇಂಗಾಲದ ಡೈ ಆಕ್ಸೈಡಿನ (CO2)  ಪ್ರಮಾಣ ಹೆಚ್ಚಾದಾಗ ಅಥವಾ ಹೆಚ್ಚು ಆಮ್ಲಜನಕ(O2) ಬೇಕೆನಿಸಿದಾಗ ನಾವು ಆಕಳಿಸುತ್ತೇವೆ. ದೊಡ್ಡ ಗುಂಪುಗಳಲ್ಲಿ ಅಥವಾ ಮುಚ್ಚಿದ ಕೋಣೆಗಳಲ್ಲಿದ್ದಾಗ ಹೆಚ್ಚು ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿದ್ದು ನಮ್ಮ ಉಸಿರು ಪೆಟ್ಟಿಗೆ ಸೇರುತ್ತದೆ. ಅದನ್ನು ಹೋಗಲಾಡಿಸಲು ನಾವು ಆಕಳಿಸುತ್ತೇವೆಂಬುದು ಸಮಂಜಸವೆನಿಸುತ್ತದೆ.
೨. ವಿಕಾಸವಾದ (Evolution Theory):
ಮಾಡುತ್ತಿರುವ  ಕೆಲಸವನ್ನು ಬದಲಾಯಿಸುವಂತೆ ಸೂಚಿಸಲು, ನಮ್ಮ ಪೂರ್ವಜರು ಆಕಳಿಸುತ್ತಿದ್ದರಂತೆ. ಇದೇ ಅಭ್ಯಾಸ ತಲೆಮಾರುಗಳಿಂದ ನಮಗೆ ಬಳುವಳಿಯಾಗಿ ಬಂದಿದೆಯೆನ್ನುವುದು ಇನ್ನೊಂದು ವಾದ.
೩. ಬೇಸರಿಕೆ:
ನಾವು ಮಾಡುತ್ತಿರುವ ಅಥವಾ ನೋಡುತ್ತಿರುವ ಕೆಲಸದಲ್ಲಿ ಉತ್ಸಾಹ ಇಲ್ಲದೇ ಇದ್ದಾಗ, ಬೇಸರಿಕೆಯಿಂದ ಆಕಳಿಕೆ ಉಂಟಾಗುತ್ತದೆಂದು ಪ್ರತಿಪಾದಿಸುತ್ತಾರೆ. ಹಾಗಿದ್ದಲ್ಲಿ, ಇನ್ನೇನು ಬಾಹ್ಯಾಕಾಶ ಯಾನ ಪ್ರಾರಂಭಿಸುತ್ತಿರುವ ಯಾನಿಗೂ, ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಸ್ಪರ್ಧೆಯಾಳಿಗೂ ಆಕಳಿಕೆ ಬರುತ್ತದಲ್ಲವೇ? ಅದು ಹೇಗೆ?
೪. ಮಿದುಳಿನ ಉಷ್ಣತೆ ಸರಿದೂಗಲು:
ಇತ್ತೀಚಿನ ಸಂಶೋಧನೆಗಳ ಪ್ರಕಾರ ಮಿದುಳಿನ ಉಷ್ಣತೆಯು ಸರಾಸರಿ ತಾಪಮಾನಕ್ಕಿಂತ ಹೆಚ್ಚಾದಾಗ, ಆಕಳಿಕೆ ಬಂದು ಮಿದುಳಿನ ಉಷ್ಣತೆ ಕಡಿಮೆಯಾಗಲು ಸಹಕರಿಸುವುದಂತೆ.

ಸಿದ್ಧಾಂತಗಳು ಒಂದೆಡೆಯಿರಲಿ,
ನಿಮಗಿದು ಗೊತ್ತೇ? ಬೆನ್ನು ಮೂಳೆಯಿರುವ ಎಲ್ಲಾ ಪ್ರಾಣಿಗಳೂ(ಮೀನಿನಿಂದ ಶುರುಮಾಡಿ ಆಕಳಿನ ವರೆಗೆ) ಆಕಳಿಸುತ್ತವೆಯೆಂದು!.

ಹಾಗೇ ಪುರಾಣಗಳ ವಿಚಾರಕ್ಕೆ ಬಂದರೆ ಮಹಾವಿಷ್ಣುವು ಮತ್ಸ್ಯಾವತಾರ ತಾಳುವುದಕ್ಕೂ ಆಕಳಿಕೆಯೇ ಕಾರಣ. ಚತುರ್ಮುಖ ಬ್ರಹ್ಮನು ಆಕಳಿಸಿದಾಗ ಹೊರಬಂದ ವೇದಗಳನ್ನು ಹಯಗ್ರೀವನೆಂಬ ದಾನವನು ಕದ್ದನಂತೆ!.

ಆ ಕಥೆ ಹಾಗಿರಲಿ,
ಆಕಳಿಕೆ ಬಗ್ಗೆ ಸ್ವಾರಸ್ಯಕರ ವಿಚಾರಗಳು ನಿಮಗೆ ತಿಳಿದಿದ್ದಲ್ಲಿ ಇಲ್ಲಿ ಹಂಚಿಕೊಳ್ಳಿ.

ನಿಮ್ಮವ,
ನಾಗರಾಜ ಸಾಠೆ


ಸಾಹಿತ್ಯ,ಚಿತ್ರ ಕೃಪೆ: ಅಂತರ್ಜಾಲ
 

Sunday, January 6, 2013

ನಕ್ಷತ್ರ ೧: ವಿದ್ಯುತ್ ಮೋಟರುಗಳು ಹೇಗೆ ಕೆಲಸಮಾಡುತ್ತವೆ?

ಇಂದು ನಾವು ಮನೆ ಮನೆಗಳಲ್ಲಿ ಉಪಯೋಗಿಸುವ ವಿದ್ಯುತ್ ಬೀಸಣಿಗೆ(ಫ್ಯಾನ್)ಗಳಿಂದ ಹಿಡಿದು ಆಕಾಶದಲ್ಲಿ ಹಾರಾಡುವ ವಿಮಾನಗಳಲ್ಲಿಯೂ ಸ್ಥಾನ ಪಡೆದಿರುವ ವಿದ್ಯುತ್ ಮೋಟರುಗಳ ಕಾರ್ಯವೈಖರಿಯ ಮೂಲ ಸಿದ್ಧಾಂತದ ಮೇಲೆ,  "ಅಂಗೈ ಆಕಾಶ" ಮೊದಲ ನಕ್ಷತ್ರದ ಮೂಲಕ ಬೆಳಕು ಚೆಲ್ಲಲು ಯತ್ನಿಸುತ್ತಿದೆ. ಮೋಟರುಗಳ ಮೂಲ ಮಂತ್ರವನ್ನು ತಿಳಿಯುವ ಕುತೂಹಲವಿದ್ದಲ್ಲಿ ಮುಂದುವರೆಯಿರಿ.

ಅಯಸ್ಕಾಂತಗಳು(Magnets)

 ಚಿತ್ರ ೧. ಪಟ್ಟಿ ಅಯಸ್ಕಾಂತ ಮತ್ತು ಅದರ ಕಾಂತ ಕ್ಷೇತ್ರ.
ಎಲ್ಲಾ ವಿದ್ಯುತ್ (ನೇರ/ಪರ್ಯಾಯ (AC/DC) ) ಮೋಟರುಗಳು ಕಾಂತೀಯತೆಯ(magnetism) ಅಡಿಯಲ್ಲಿ ಕೆಲಸಮಾಡುತ್ತವೆ.
ನಾವು ನಮ್ಮ ಚಿಕ್ಕಂದಿನಲ್ಲಿ ಅಯಸ್ಕಾಂತಗಳೊಂದಿಗೆ ಆಡಿರುತ್ತೇವೆ ಮತ್ತು ಶಾಲೆಯ ಪಾಠಗಳಲ್ಲಿ ಅಯಸ್ಕಾಂತಗಳ ಬಗ್ಗೆ ಕಲಿತಿರುತ್ತೇವೆ. ಯಾವುದೇ ಅಯಸ್ಕಾಂತವು ಒಂದು ಉತ್ತರ ಹಾಗು ಒಂದು ದಕ್ಷಿಣ ಧ್ರುವವನ್ನು ಹೊಂದಿರುತ್ತದೆ. ಹಾಗೆಯೇ ಎರಡು ಪಟ್ಟಿಯಂತಹ ಅಯಸ್ಕಾಂತಗಳನ್ನು(Bar Magnets) ಹತ್ತಿರ ತಂದಲ್ಲಿ ಸಮಧ್ರುವ ಗಳು ದೂರತಳ್ಳಲ್ಪಡುತ್ತವೆ ಹಾಗು ವಿರುದ್ಧ ಧ್ರುವಗಳು ಹತ್ತಿರ ಸೆಳೆಯಲ್ಪಡುತ್ತವೆ ಎಂಬುದು ನಮಗೆ ತಿಳಿದ ವಿಚಾರವೇ ಸರಿ.
ಚಿತ್ರ ೨. ಮಧ್ಯದ ಅಯಸ್ಕಾಂತವು ಸಮ ಧ್ರುವಗಳಿಂದ ದೂರ ತಳ್ಳಲ್ಪಡುತ್ತಾ, ವಿರುದ್ಧ ಧ್ರುವಗಳು ಸೆಳೆಯಲ್ಪಡುತ್ತವೆ.

ಈಗ ಚಿತ್ರ ೨ರಲ್ಲಿ ತೋರಿಸಿರುವಂತೆ ಮೂರು ಅಯಸ್ಕಾಂತಗಳನ್ನು ತೆಗೆದುಕೊಂಡು; ಎಡ, ಬಲದ ಅಯಸ್ಕಾಂತಗಳನ್ನು ಸ್ಥಿರವಾಗಿ ನಿಲ್ಲಿಸಿ, ಮಧ್ಯದ ಅಯಸ್ಕಾಂತವು ತನ್ನ ಮಧ್ಯ ಬಿಂದುವಿನ ಸುತ್ತ ತಿರುಗಲು ಅವಕಾಶವಿರುವಂತೆ ಜೋಡಿಸಿದ್ದಲ್ಲಿ; ವಿರುದ್ಧ ಧ್ರುವಗಳ ಸೆಳೆತದಿಂದ ಮಧ್ಯದ ಅಯಸ್ಕಾಂತವು ತಿರುಗುತ್ತಾ ಚಿತ್ರ ೩ ರಲ್ಲಿ ತೋರಿಸಿರುವ ಸ್ಥಿತಿಗೆ ಬಂದು ನಿಲ್ಲುತ್ತದೆ.
ಚಿತ್ರ ೩. ಮಧ್ಯದಲ್ಲಿರುವ ಅಯಸ್ಕಾಂತದ ಧ್ರುವಗಳನ್ನು ಬದಲಿಸದೆ ಹೋದಲ್ಲಿ ಮೂರು ಅಯಸ್ಕಾಂತಗಳು ಇದೇ ಸ್ಥಿತಿಯಲ್ಲಿರುತ್ತವೆ.

ಈಗ ಮಧ್ಯ ಅಯಸ್ಕಾಂತದ ಧ್ರುವಗಳನ್ನು ಬದಲಿಸಿದರೆ(ಚಿತ್ರ ೨ ರಂತೆ) ಮೇಲೆ ತಿಳಿಸಿದ ಕ್ರಿಯೆಯು ಪುನರಾವರ್ತಿಸುತ್ತದೆ. ಹೀಗೆಯೇ ಮಾಡಿದಲ್ಲಿ ಮಧ್ಯದ ಅಯಸ್ಕಾಂತವು ಗಿರಗಿರನೆ ತಿರುಗಲಾರಂಭಿಸುತ್ತದೆ!!.

ಆದರೆ ಸ್ಥಿರ ಅಯಸ್ಕಾಂತಗಳ(permanent magnets) ಧ್ರುವಗಳನ್ನು ಬದಲಾಯಿಸಲಾಗುವುದಿಲ್ಲ. ಮೇಲೆ ತಿಳಿಸಿದ ತತ್ವವನ್ನು ಸಾಧಿಸಲು ವಿದ್ಯುದಯಸ್ಕಾಂತಗಳು ಸಹಾಯಕ್ಕೆ ಬರುತ್ತವೆ.

ವಿದ್ಯುದಯಸ್ಕಾಂತಗಳು(Electro-magnets)  
ಚಿತ್ರ ೪. ವಿದ್ಯುದಯಸ್ಕಾಂತ.

ಒಂದು ಕಬ್ಬಿಣದ ಪಟ್ಟಿಯೊಂದನ್ನು ತೆಗೆದುಕೊಂಡು ವಿದ್ಯುತ್ ವಾಹಕ ತಂತಿಯನ್ನು ಚಿತ್ರ ೪ ರಲ್ಲಿ ತೋರಿಸಿರುವಂತೆ ಸುತ್ತಿದರೆ ವಿದ್ಯುದಯಸ್ಕಾಂತವಾಗುತ್ತದೆ. ವಿದ್ಯುದಯಸ್ಕಾಂತವು ತನ್ನ ಮೂಲಕ ವಿದ್ಯುತ್ ಹರಿಯುತ್ತಿದ್ದಾಗ ಮಾತ್ರ ಕಾಂತೀಯ ಗುಣಗಳನ್ನು ಹೊಂದಿರುತ್ತದೆ ಹಾಗು ವಿದ್ಯುತ್ ಹರಿವು ನಿಂತ ಬಳಿಕ ತನ್ನ ಕಾಂತೀಯ ಗುಣಗಳನ್ನುಕಳೆದುಕೊಳ್ಳುತ್ತದೆ.
ಚಿತ್ರ ೫. ವಿದ್ಯುದಯಸ್ಕಾಂತ ಧ್ರುವಗಳು ಮತ್ತು ವಿದ್ಯುತ್ ಹರಿವು.

ಚಿತ್ರ ೬. ವಿದ್ಯುದಯಸ್ಕಾಂತ ಧ್ರುವಗಳು ಮತ್ತು ವಿದ್ಯುತ್ ಹರಿವು (ವಿರುದ್ಧ ದಿಕ್ಕು).


ವಿದ್ಯುತ್ ಹರಿವಿನ ದಿಕ್ಕಿಗನುಸಾರವಾಗಿ, ಚಿತ್ರ ೫ ಮತ್ತು ೬ರಲ್ಲಿ ತೋರಿಸಿರುವಂತೆ ವಿದ್ಯುದಯಸ್ಕಾಂತದ ಧ್ರುವಗಳು ಅದಲು-ಬದಲಾಗುತ್ತವೆ. ಹೀಗೆ ವಿದ್ಯುದಯಸ್ಕಾಂತದ ವಿದ್ಯುತ್ ಹರಿವಿನ ದಿಕ್ಕನ್ನು ಪ್ರತಿ ಬಾರಿ ಬದಲಿಸುತ್ತ ವಿದ್ಯುತ್ ಮೋಟರಿನ ಸಿದ್ಧಾಂತವನ್ನು ಸಾಧಿಸಲಾಗುತ್ತದೆ.


ಚಿತ್ರ ೭. ನೇರ ವಿದ್ಯುತ್ ಮೋಟರಿನ ವ್ಯವಸ್ಥೆ.

ಚಿತ್ರ ೭ ರಲ್ಲಿ ತೋರಿಸಿರುವಂತೆ ಎರಡು ಸ್ಥಿರ(stator) ಬ್ರಶ್(ಗುಂಜು :) )ಗಳು ಹಾಗು ಎರಡು ತಿರುಗಣೆಯ(rotor/commutator) ವ್ಯವಸ್ಥೆಯನ್ನು ಉಪಯೋಗಿಸಿ ಮಧ್ಯದ ಅಯಸ್ಕಾಂತ(ಹಾಗು ತಿರುಗಣೆ) ತಿರುಗಿದಾಗ ವಿದ್ಯುತ್ ಪ್ರವಾಹದ ದಿಕ್ಕು ಬದಲಾಗುತ್ತ ಅಯಸ್ಕಾಂತ ತಿರುಗಲಾರಂಭಿಸುತ್ತದೆ!!. ಇಷ್ಟು ಇಲೆಕ್ಟ್ರಿಕ್ ಮೋಟರಿನ ಮೂಲ ಸಿದ್ಧಾಂತ.

ಚಿತ್ರ ೮. ನೇರ ವಿದ್ಯುತ್ ಮೋಟರ್.

ಹಾ! ಇಷ್ಟೆಲ್ಲಾ ಕಲಿತು "ಇಲೆಕ್ಟ್ರಿಕ್ ಮೋಟರ್"ಗೊಂದು ಕನ್ನಡ ನಾಮಕರಣ ಮಾಡಬೇಡವೇ??
"ವಿದ್ಯುತ್ ಗಿರಗಿಟ್ಲೆ" 
 ಹೇಗಿದೆ?
ನಿಮಗೆ ಬೇರೆ ಹೆಸರುಗಳು ಹೊಳೆದಲ್ಲಿ ತಿಳಿಸಿ.

ಈ ಲೇಖನದ ಬಗ್ಗೆ ’ಕಾಮೆಂಟ್ಸ್’ಗಳ ಮೂಲಕ ಮುಕ್ತವಾಗಿ ಚರ್ಚಿಸಬಹುದು. ಅದರಿಂದ ನಮ್ಮೆಲ್ಲರ ಬುದ್ಧಿಗಿಷ್ಟು ಕಿಚ್ಚು ಹಚ್ಚಬಹುದು.
ಮತ್ತೆ ಇನ್ನೊಂದು ಲೇಖನದೊಂದಿಗೆ ಭೇಟಿಯಾಗೋಣ.

ಚಿತ್ರ ಹಾಗು ಸಿದ್ಧಾಂತ ಕೃಪೆ: ಅಂತರ್ಜಾಲ.